ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.13: ಎಲ್ಲ ಕಡೆಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವ ಬಾಕಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷವು ಇನ್ನೆರಡು ದಿನಗಳ ಒಳಗೆ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಾತಾವರಣ ಬಿಜೆಪಿ ಪರವಾಗಿದೆ ಎಂದರಲ್ಲದೆ, ಒಂದೊಂದು ಕ್ಷೇತ್ರದಲ್ಲಿ ನಾಲ್ಕೈದು ಆಕಾಂಕ್ಷಿಗಳಿದ್ದಾಗ ಸಹಜವಾಗಿ ಒಬ್ಬರಿಗೆ ಟಿಕೆಟ್ ಸಿಗುತ್ತದೆ. ಉಳಿದವರು ನೋವು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಬಂಡಾಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು.
ಅಸಮಾಧಾನ ಇರುವವರು, ನೋವು ವ್ಯಕ್ತಪಡಿಸಿದರನ್ನು ಕರೆದು ಮಾತನಾಡುತ್ತೇವೆ ಎಂದು ತಿಳಿಸಿದರು. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲದೆ ನೇರ ಹೋರಾಟ ಮಾಡಲಿದ್ದೇವೆ. ಎಲ್ಲ ಪ್ರಮುಖ ನಾಯಕರನ್ನು ಎದುರಿಸುತ್ತೇವೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಕನಕಪುರ ಮತ್ತು ವರುಣಾದಲ್ಲಿ ಅಶೋಕ್ ಮತ್ತು ಸೋಮಣ್ಣರನ್ನು ಕಾಂಗ್ರೆಸ್ಸಿಗರು ಮೊದಲು ಎದುರಿಸಲಿ. ಬಳಿಕ ಬೇರೆಯವರ ಕುರಿತು ಯೋಚಿಸೋಣ ಎಂದರು.
ಸುಮಾರು 20-22 ಜನರು ಈಗಾಗಲೇ ಬಿ ಫಾರಂ ಪಡೆದಿದ್ದಾರೆ. ಉಳಿದವರೆಲ್ಲರಿಗೂ ಶೀಘ್ರವೇ ಬಿ ಫಾರಂ ನೀಡುತ್ತೇವೆ ಎಂದು ಅವರು ನುಡಿದರು.