ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.10: ದಿ ಜುವೆಲ್ಲರಿ ಅಸೋಸಿಯೇಷನ್ ಬೆಂಗಳೂರು ಸಂಸ್ಥೆ ವತಿಯಿಂದ ಇದೇ 15ರಿಂದ ನವೆಂಬರ್ 30ರವರೆಗೆ 45 ದಿನಗಳ ಎರಡನೇ ಆವೃತ್ತಿಯ ಗೋಲ್ಡ್ ಫೆಸ್ಟಿವಲ್ ಆಯೋಜಿಸಲಾಗಿದೆ.
ಈ ಬಾರಿ ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುವಂತೆ ಗ್ರಾಹಕರನ್ನು ಪ್ರೇರೇಪಿಸಲು ಬೆಂಗಳೂರು, ತುಮಕೂರು, ಹಾಸನ ಹಾಗೂ ಶಿವಮೊಗ್ಗ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿರುವ 150ಕ್ಕೂ ಅಧಿಕ ಆಭರಣ
ಮಳಿಗೆಗಳಲ್ಲಿ ಉತ್ಸವ ಜರುಗಲಿದೆ. ‘ಚಿನ್ನವನ್ನು ಉಳಿಸಿ, ಚಿನ್ನ ನಿಮ್ಮನ್ನು ಉಳಿಸುತ್ತದೆ’ ಪರಿಕಲ್ಪನೆಯಡಿ ನಡೆಯುವ ಉತ್ಸವದಲ್ಲಿ ಅಂದಾಜು 2,500 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಯುವ ನಿರೀಕ್ಷೆ ಇದೆ.
ಕಳೆದ ಆವೃತ್ತಿಗಿಂತ ಈ ಬಾರಿ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲಾಗಿದೆ. ಗ್ರಾಹಕರು 1 ಕೆ.ಜಿ. ಚಿನ್ನ ಬಂಪರ್ ಬಹುಮಾನವನ್ನು ಗೆಲ್ಲುವ ಅವಕಾಶ ಇದೆ. ಮೊದಲ ಬಹುಮಾನ 200 ಗ್ರಾಂ, 2ನೇ ಹಾಗೂ 3ನೇ ಬಹುಮಾನ ತಲಾ 100 ಗ್ರಾಂ ಚಿನ್ನವನ್ನು ಬಹುಮಾನ ರೂಪದಲ್ಲಿ ವಿಜೇತರಿಗೆ ನೀಡಲಾಗುತ್ತದೆ. ಅಲ್ಲದೆ, ಪ್ರತಿ ವಾರ ಬಂಪರ್ ಡ್ರಾ ಇರಲಿದ್ದು, ನಾಲ್ಕು ವಾರ ನಡೆಯಲಿದೆ. ಒಟ್ಟು 70 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ಹಾಗೂ 12.75 ಲಕ್ಷ ರೂ. ಮೌಲ್ಯದ 16 ಸಾವಿರ ಗ್ರಾಂ ಬೆಳ್ಳಿ, ಹ್ಯುಂಡೈ ಐ10 ಕಾರು ಗೆಲ್ಲುವ ಅವಕಾಶವಿದೆ.
‘ಈ ಬಾರಿ ಒಟ್ಟು ಬಹುಮಾನ ಮೌಲ್ಯ 2.5 ಕೋಟಿ ರೂ. ಇರುತ್ತದೆ. ಮಳಿಗೆಯಲ್ಲಿ 5 ಸಾವಿರ ರೂ.ಗಿಂತ ಅಧಿಕ
ಮೌಲ್ಯದ ಚಿನ್ನಾಭರಣ ಖರೀದಿಸಿದರೆ ಉಚಿತವಾಗಿ ಡಿಜಿಟಲ್ ಕೂಪನ್ ಸಿಗುತ್ತದೆ. ಸಮಾರೋಪದಲ್ಲಿ ಲಕ್ಕಿ ಡ್ರಾನಲ್ಲಿ ಗೆದ್ದ ಗ್ರಾಹಕರಿಗೆ ಬಂಪರ್ ಬಹುಮಾನ ವಿತರಿಸಲಾಗುತ್ತದೆ,’ ಎಂದು ದಿ ಜುವೆಲ್ಲರಿ ಅಸೋಸಿಯೇಷನ್ ಬೆಂಗಳೂರು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಗನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟ ರಮೇಶ್ ಅರವಿಂದ್ ರಾಯಭಾರಿ:
2ನೇ ಆವೃತ್ತಿಯ ಗೋಲ್ಡ್ ಫೆಸ್ಟಿವಲ್ಗೆ ನಟ ರಮೇಶ್ ಅರವಿಂದ್ ರಾಯಭಾರಿಯಾಗಿದ್ದಾರೆ. ‘ಬೆಂಗಳೂರು ಗೋಲ್ಡ್ ಫೆಸ್ಟಿವಲ್’ ಕಾರ್ಯಕ್ರಮದ ಹೊಸ ಲೋಗೋವನ್ನು ನಟ ರಮೇಶ್ ಅರವಿಂದ್ ಸೋಮವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಕಷ್ಟದ ಸಂದರ್ಭದಲ್ಲಿ ನಮಗೆ ನೆರವಾಗುತ್ತದೆ. ಯುವ ಜನಾಂಗ ನಮ್ಮ ಉಳಿತಾಯ ಹಣದಲ್ಲಿ ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಬೇಕು. ‘ಬೆಂಗಳೂರು ಗೋಲ್ಡ್ ಫೆಸ್ಟಿವಲ್’ಗೆ ನನ್ನನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದಕ್ಕೆ ಖುಷಿಯಾಗಿದೆ. ಕುಟುಂಬ ಸಮೇತ ಈ ಉತ್ಸವವನ್ನು ಆಚರಿಸೋಣ. ಬಂಪರ್ ಬಹುಮಾನ ಗೆಲ್ಲುವ ಅವಕಾಶವನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಮೆಹ್ತಾ, ಕಾರ್ಯದರ್ಶಿ ಬಿಪಿನ್ ಮೆಹ್ತಾ, ಜಂಟಿ ಕಾರ್ಯದರ್ಶಿ ಪ್ರವೀಣ್ ಕೆ. ಒಸ್ವಾಲ್, ಖಜಾಂಚಿ ಆರ್.ವಿ. ತುಷಾರ್ ಸೇರಿ ಮತ್ತಿತರರಿದ್ದರು.