ಸುದ್ದಿಮೂಲ ವಾರ್ತೆ
ಮೈಸೂರು, ಅ.3:ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು ಒಂದೇ ಸಮನೇ ಆದೇಶ ಮಾಡಲಾಗುತ್ತಿದೆ ಎಂದು ಖಂಡಿಸಿ ನಡೆಯುತ್ತಿರುವ ಹೋರಾಟದ ಕಿಚ್ಚು ಮುಂದುವರಿದಿದೆ. ಮಂಡ್ಯದಲ್ಲಿ ಬೇವು-ಬೆಲ್ಲ ಹಿಡಿದು, ಮೈಸೂರಿನಲ್ಲಿ ಭಾಗ್ಯಗಳ ಜೊತೆ ನೇಣಿನ ಭಾಗ್ಯ ಎಂದು ಘೋಷಣೆ ಕೂಗುತ್ತಾ ಮತ್ತು ಚಾಮರಾಜನಗರದಲ್ಲಿ ರೇಲ್ವೆ ನಿಲ್ದಾಣ ಬಳಿ ಧರಣಿ ನಡೆಸಿ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.
ಮೈಸೂರು : ಕಾವೇರಿ ಕ್ರಿಯಾ ಸಮಿತಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವ ಅಂಗವಾಗಿ ಅದನ್ನು ಬೆಂಬಲಿಸಿ ನಮ್ಮ ಕರ್ನಾಟಕ ಸೇನಾ ಪಡೆ ವತಿಯಿಂದ ರಾಜ್ಯ ಸರ್ಕಾರದ ಐದು ಭಾಗ್ಯಗಳ ಜೊತೆ ” ಸುಪ್ರೀಂ ಕೋರ್ಟ್ ಕನ್ನಡಿಗರಿಗೆ ನೇಣಿನ ಭಾಗ್ಯ “ವನ್ನು ನೀಡಿದೆ ಎಂದು ಪ್ರತಿಭಟನೆಯನ್ನು ನಡೆಸಲಾಯಿತು.
ಇಲ್ಲಿಯ ತನಕ ನಮ್ಮ ರಾಜ್ಯಕ್ಕೆ ಬರಿ ಅನ್ಯಾಯವಾಗಿದೆ. ಒಂದೇ ಒಂದು ಬಾರಿಯೂ ಕಾವೇರಿ ನ್ಯಾಯ ಮಂಡಳಿಯಿಂದ ನ್ಯಾಯ ಸಿಕ್ಕಿಲ್ಲ. ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟಿಗೆ ಕಣ್ಣಿಲ್ಲ – ಕಿವಿ ಇಲ್ಲ. ನಮ್ಮ ರಾಜ್ಯದಲ್ಲಿ ಕುಡಿಯಲು ನೀರಿಲ್ಲದಿದ್ದರೂ, ತಮಿಳುನಾಡಿನ ಒತ್ತಾಯಕ್ಕೆ ಮಣಿದು ಮಾರನೇ ಬೆಳಗ್ಗೆ ನೀರು ಬಿಡಲು ಆದೇಶಿಸಲಾಗುತ್ತಿದೆ ಎಂದು ಖಂಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ ಜೂ.ವಿಷ್ಣು, ಸುರೇಶ್ ಗೋಲ್ಡ್, ಕೃಷ್ಣಯ್ಯ ಸಿ ಹೆಚ್, ಪ್ರಭುಶಂಕರ್, ಡಾ. ಶಾಂತರಾಜೇಅರಸ್, ಪ್ರಜೀಶ, ಡಾ. ಮೊಗಣ್ಣಾಚಾರ್, ಸಿದ್ಧಲಿಂಗಪ್ಪ, ಶಿವಲಿಂಗಯ್ಯ, ಅಂಬಾ ಅರಸ್ ಸೇರಿದಂತೆ ಮತ್ತಿತರರು ಇದ್ದರು.
ಬೇವು- ಬೆಲ್ಲ ಹಿಡಿದು ಪ್ರತಿಭಟನೆ
ಮಂಡ್ಯದಲ್ಲಿ ಕನ್ನಡ ಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡು, ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡಿಗೆ ಬೆಲ್ಲ-ಕರ್ನಾಟಕಕ್ಕೆ ಬೇವು ಎಂಬಂತೆ ಚೊಂಬಿನಲ್ಲಿ ಬೇವು-ಬೆಲ್ಲ ಹಿಡಿದು ವಿನೂತನ ಹೋರಾಟ ನಡೆಸಿದರು
ರೈತರನ್ನು ಉಗ್ರಗಾಮಿಗಳ ರೀತಿಯಲ್ಲಿ ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ದೂರಿದರು. ಕನ್ನಂಬಾಡಿ ಖಾಲಿ ಖಾಲಿ, ತಮಿಳುನಾಡು ಜಾಲಿ ಜಾಲಿ, ರೈತರ ಕಿವಿಗೆ ಹೂವಿಟ್ಟು, ʼರೈತರ ಕೈಗೆ ಜೊಂಬಿಟ್ಟ ಸರ್ಕಾರʼ ಎಂಬಿತ್ಯಾದಿ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಬೋರಯ್ಯ, ಸುನಂದಾ ಜಯರಾಂ, ಸಿ.ಟಿ. ಮಂಜುನಾಥ್, ಅಂಬುಜಮ್ಮ, ಕನ್ನಡಸೇನೆ ಮಂಜುನಾಥ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆ ಮುಂದುವರೆದಿದ್ದು , ಮಂಗಳವಾರ ರೇಲ್ವೆನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು. ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಹಾಗೂ ನಿರ್ವಹಣಾ ಮಂಡಲಿ ವಿರುದ್ದ ಘೋಷಣೆ ಕೂಗಿದರು.
ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸ್ ಮಾತನಾಡಿ, ಎರಡೂ ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ವಿಚಾರದಲ್ಲಿ ಶತ ಶತಮಾನದಿಂದ ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ, ಚಾ.ವೆಂರಾಜ್ ಗೋಪಾಲ್, ಗು.ಪುರುಷೋತ್ತಮ, ಮಹೇಶ್ ಗೌಡ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.