ಸುದ್ದಿಮೂಲ ವಾರ್ತೆ
ತುಮಕೂರು ನ.10: ಸರ್ಕಾರವು ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಪಾಲಿಕೆ ವ್ಯಾಪ್ತಿಯ ಪ್ರೌಢಶಾಲೆ ಹಂತದ ಮಕ್ಕಳಿಗೆ “ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ” ಎಂಬ ಕಾರ್ಯಕ್ರಮವನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡು ಪೌಷ್ಠಿಕ ಕೈತೋಟ, ತಾರಸಿ ಕೈ ತೋಟ ಬೆಳೆಸುವಂತೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ತರಕಾರಿ ಹಾಗೂ ಸೊಪ್ಪಿನ ಬೀಜಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆಧುನೀಕರಣದಿಂದ ನಗರ ಪ್ರದೇಶದ ನಿವಾಸಿಗಳಲ್ಲಿ ಗಿಡ ಮರಗಳ ಪರಿಚಯ, ಮಹತ್ವ, ಪಾಲನೆ ಮತ್ತು ಪರಿಸರ ಪ್ರೇಮ ಗುಣಗಳನ್ನು ಜೀವನಶೈಲಿಯನ್ನಾಗಿಸುವ ಅವಶ್ಯಕತೆ ಉಂಟಾಗಿರುತ್ತದೆ ಎಂದರು.
ತೋಟಗಾರಿಕೆ ಉಪನಿರ್ದೇಶಕರಾದ ಶಾರದಮ್ಮ ಬಿ.ಸಿ. ಮಾತನಾಡಿ, ನಗರ ವಾಸಿಗಳು ಒತ್ತಡದ ಜೀವನದಿಂದ ಹೊರಬಂದು ಉತ್ತಮ ಪರಿಸರದಲ್ಲಿ ಜೀವಿಸಲು ಮನೆಯ ಅಂಗಳದಲ್ಲಿ ತಾರಸಿ ಕೈತೋಟ ಬೆಳೆಸುವ ಅವಶ್ಯಕತೆ ಇದ್ದು, ಇದಕ್ಕಾಗಿ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಪ್ರಭಾವತಿ, ಪಾಲಿಕೆ ಆಯುಕ್ತೆ ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್,ತೋಟಗಾರಿಕೆ ಇಲಾಖೆಯ ಹೇಮಲತ ಹೆಚ್.ಎನ್., ಮುಖಂಡರಾದ ನಿಖೇತ್ ರಾಜ್ ಮೌರ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.