ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.13: ಅಸ್ಪೃಶ್ಯತೆ ತಾಂಡವವಾಡುತ್ತಿದ್ದು, ಜಾತಿ ಪದ್ಧತಿಯನ್ನು ಬುಡ ಸಮೇತ ನಿರ್ಮೂಲನೆ ಮಾಡಬೇಕು ಎಂದು ಮಕ್ಕಳ ಹಕ್ಕು ಹೋರಾಟಗಾರ ಟಿ. ವೆಂಕಟೇಶ್ ತಿಳಿಸಿದರು.
ತಾಲೂಕಿನ ನಂದಗುಡಿಯ ಬಜಾರ್ ರಸ್ತೆಯಲ್ಲಿ ಹಾಗೂ ಇಟ್ಟಸಂದ್ರ ಗ್ರಾಮದಲ್ಲಿ ಹೊಸಕೋಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಸಿಂಚನ ಕಲಾ ಕೇಂದ್ರ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಕಾಯ್ದೆ1989ರ ಕುರಿತು ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ಹಳ್ಳಿಗಳಲ್ಲಿ ಇನ್ನು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಮುಕ್ತಿ ಸಿಕ್ಕಿಲ್ಲ.
ಸಂವಿಧಾನದಲ್ಲಿ ಮಾತ್ರ ಸಮಾನತೆ ಇದೆ. ಆದರೆ ಎಲ್ಲಿಯೂ ಸಮಾನತೆ ಜಾರಿಯಾಗಿಲ್ಲ. ದೌರ್ಜನ್ಯ ದಬ್ಬಾಳಿಕೆಗೆ ಒಳಗಾಗಿ ದಲಿತರು ನಿಸ್ಸಾಹಯಕರಾಗಿದ್ದಾರೆ. ಸಾಮಾಜಿಕ ಅಸಾಮಾನತೆಗಳನ್ನು ಹೋಗಲಾಡಿಸಲು ಸಾಧ್ಯವಾಗದಿರುವುದು ವಿಷಾಧನೀಯ ಎಂದರು.
ಪಿಡಿಒ ಪುಷ್ಪಲತಾ ಮಾತನಾಡಿ, ಅಸ್ಪಶ್ಯತೆ ನಿವಾರಣೆಗಾಗಿ ಸರ್ಕಾರ ಎಸ್ಸಿ, ಎಸ್ಟಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ, ಶಿಕ್ಷಣಕ್ಕೆ ಉತ್ತೇಜನ ನೀಡಲು ವಿದ್ಯಾರ್ಥಿ ವೇತನ, ಸರಳ ಸಾಮೂಹಿಕ ವಿವಾಹವಾದಲ್ಲಿ 10 ಜೋಡಿಗಳಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
ಈಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆತರೆ ಜಾತೀಯತೆ ನಿರ್ಮೂಲನೆ ಆಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂನ ಅಧ್ಯಕ್ಷೆ ಬಿಂದು ದೇವೇಗೌಡ, ಪಿಡಿಒ ಪುಷ್ಪಲತಾ, ಸಮಾಜ ಕಲ್ಯಾಣ ಇಲಾಖೆಯ ಸಂತೋಷ್, ರಾಮೇಗೌಡ, ಮಾಜಿ ಅಧ್ಯಕ್ಷ ರಾಮಾಂಜಿನಪ್ಪ, ಜಾನಪದ ಜಾತ್ರೆಪ್ರಧಾನ ನಿರ್ದೇಶಕಿ ಶಿವಮ್ಮ, ಜಿವಿಕಾ ಸಂಯೋಜಕ ನಾರಾಯಣಪ್ಪ, ಮುಖಂಡರಾದ ಆಂಜಿನಪ್ಪ,ಮುನಿಯಪ್ಪ, ಗ್ರಾಪಂನ ಸಿಬ್ಬಂದಿ ವರ್ಗಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.