ಅದಿಲಾಬಾದ್, ನ.18: ತೆಲಂಗಾಣದಲ್ಲಿ ಹತ್ತು ವರ್ಷಗಳ ಕೆಸಿಆರ್ ಆಡಳಿತದಿಂದ ಜನತೆ ಆಕ್ರೋಶ ಗೊಂಡಿದ್ದು, ಬದಲಾವಣೆ ಗಾಳಿ ಬೀಸುತ್ತಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ತೆಲಂಗಾಣದ ಅದಿಲಾಬಾದ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಂದಿ ಶ್ರೀನಿವಾಸ ರೆಡ್ಡಿ ಪರ ಖ್ಯಾತ ನಟ ಅಕ್ಬರ್ ಬಿನ್ ತಬರ್ ಜತೆಗೂಡಿ ಸುಂದರಿಯಾ ನಗರದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಅವರು, ತೆಲಂಗಾಣ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ರಾಜ್ಯದಲ್ಲಿ ಹತ್ತು ವರ್ಷ ಆಡಳಿತ ನಡೆಸಿದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಜನರ ನಿರೀಕ್ಷೆ ಹುಸಿ ಗೊಳಿಸಿದೆ. ಕೊಟ್ಟ ಮಾತು ತಪ್ಪಿದೆ, ಜನ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಭರವಸೆ ಈಡೇರಿಸಿದ್ದು ಅದೇ ರೀತಿ ತೆಲಂಗಾಣ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಗ್ಯಾರಂಟಿ ಜಾರಿ ಗೊಳಿಸಿಯೇ ತೀರಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿ ಆರ್ ಎಸ್ ಮುಖಂಡ ಮಹಮದ್ ರಫಿ ಹಾಗೂ ಬೆಂಬಲಿಗರು ಜಮೀರ್ ಅಹಮದ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. ನಂತರ ದ್ವಾರಕಾ ನಗರದಲ್ಲಿ ಬಹಿರಂಗ ಸಭೆ ನಡೆಸಿ ಮತಾಯಾಚನೆ ಮಾಡಿದರು.
ಮಹಾರಾಷ್ಟ್ರ ಮಾಜಿ ಸಚಿವ ಅನಿಸ್ ಅಹಮದ್, ಲೋಕಸಭೆ ಕ್ಷೇತ್ರದ ಉಸ್ತುವಾರಿ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಂಐಎಂ ಪಾಲಿಕೆ ಸದಸ್ಯ ರಶೀದ್ ಭಾಯ್ ಹಾಗೂ ಬಿಆರ್ಎಸ್, ಎಎಪಿಯ ಹಲವಾರು ಮುಖಂಡರು ಜಮೀರ್ ಅಹಮದ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು.
ಸಂಜೆ ಅಸೀಫಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜ್ಮಿರಾ ಶ್ಯಾಮ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮತ ಯಾಚನೆ ಮಾಡಿದರು.