ಸುದ್ದಿಮೂಲ ವಾರ್ತೆ
ಬೆಂಗಳೂರು, ಏ, 9; ಅಮೂಲ್ ಜೊತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವ ಕೆಎಂಎಫ್ ವಿಲೀನ ಪ್ರಸ್ತಾಪವೇ ಇಲ್ಲ ಎಂದು ರಾಜ್ಯದ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಕೌಂಟರ್ಗಳು ಲಕ್ಷಾಂತರ ಇವೆ. ಆನ್ಲೈನ್ ವ್ಯವಸ್ಥೆ ಈಗಲೂ ಇದೆ. ಕೆಎಂಎಫ್ ಭದ್ರ ಬುನಾದಿ ಕರ್ನಾಟಕದಲ್ಲಿದೆ. ಈಗ ಕೊರೆ ಕಾಲ. ಹಾಲು ಉತ್ಪಾದನೆ ಬೇಸಿಗೆ ಕಾಲದಲ್ಲಿ ಕಡಿಮೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.
ಕರ್ನಾಟಕದಲ್ಲಿ 15 ಮಿಲ್ಕ್ ಯೂನಿಯನ್ಗಳಿವೆ. ಎಲ್ಲವೂ ಲಾಭದಲ್ಲಿವೆ. ಕೋವಿಡ್ ವೇಳೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಿಗತೆ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡಲು ಏರ್ಪಾಡು ಮಾಡಲಾಗಿತ್ತು. ಅದಕ್ಕೆ ಬೇಕಾದ ಹಣವನ್ನು ಕೆಎಂಎಫ್ಗೆ ಕೊಡಲಾಗಿತ್ತು. ಮಿಗತೆ ಹಾಲು ಉಚಿತವಾಗಿ ಕೊಡಲು ಆದೇಶ ಮಾಡಿದ್ದಾಗಿ ವಿವರಿಸಿದರು.
ಕೆಎಂಎಫ್ನ ನಂದಿನಿ ವಿಶ್ವಾದ್ಯಂತ ವಹಿವಾಟು ಹೊಂದಿದೆ. ಕಳೆದ ವರ್ಷ ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆಯಲ್ಲಿ ಕೇಂದ್ರದ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ನಂದಿನಿ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ನೆರವು ಪಡೆಯಲು ಅಮೂಲ್ ಜೊತೆ ಚರ್ಚಿಸಲು ತಿಳಿಸಿದ್ದಾಗಿ ವಿವರಿಸಿದರು.
ನಂದಿನಿ ಸೊಸೈಟಿಗಳು 25- 26 ಲಕ್ಷ ರೈತರಿಂದ ಹಾಲು ಖರೀದಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ನಂದಿನಿ ಉತ್ಪನ್ನವನ್ನೇ ಖರೀದಿ ಮಾಡುತ್ತಾರೆ. ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಭದ್ರವಾಗಿ ಬೆಳೆದಿವೆÉ. ಯಾರೇ ಸ್ಪರ್ಧೆ ಮಾಡಿದರೂ ಸಮರ್ಥ ಕೆಎಂಎಫ್ ಫೆಡರೇಷನ್, ಇಲ್ಲಿನ ಮಿಲ್ಕ್ ಯೂನಿಯನ್ಗಳ ಜೊತೆ ಸ್ಪರ್ಧೆ ಮಾಡಿ ಗೆಲ್ಲಲು ಅಸಾಧ್ಯ ಎಂದು ನುಡಿದರು.
ಅಮೂಲ್ ಹಾಲನ್ನು ಆನ್ಲೈನ್ ಮೂಲಕ ಲೀಟರ್ಗೆ 57 ರೂ.ಗೆ ಮಾರಾಟ ಮಾಡಿದರೆ, ನಾವು 39 ರೂಗೆ ಮಾರಾಟ ಮಾಡುತ್ತೇವೆ. ತಮಿಳುನಾಡು ಮತ್ತಿತರ ರಾಜ್ಯಗಳಿಗೆ ನಮ್ಮ ಉತ್ಪನ್ನಗಳನ್ನು ಕಳುಹಿಸುತ್ತಿದ್ದೇವೆ ಎಂದು ವಿವರಿಸಿದರು.
ನಂದಿನಿ ಬ್ರ್ಯಾಂಡ್ ಅಳಿಸಲು ಅಸಾಧ್ಯ. ಸರಕಾರದಿಂದ ಗರಿಷ್ಠ ಸಹಕಾರ ನೀಡಲಾಗುತ್ತಿದೆ. ಗುಜರಾತ್ ಮಾದರಿ ಅನುಸರಿಸಿದರೆ ಇನ್ನಷ್ಟು ಬೆಳೆಸಲು ಸಾಧ್ಯ ಎಂಬ ಚಿಂತನೆ ಇದೆ. ಗುಜರಾತ್, ಕರ್ನಾಟಕ ಎರಡೂ ಕಡೆ ಮಿಲ್ಕ್ ಯೂನಿಯನ್ಗಳು ಬಲಾಢ್ಯವಾಗಿವೆ. ಆಂಧ್ರಕ್ಕೆ ಲಾಡು ತಯಾರಿಸಲು ನಮ್ಮ ತುಪ್ಪ ಸರಬರಾಜು ಮಾಡುತ್ತಿದ್ದೇವೆ ಎಂದರು.
ಕೆಎಂಎಫ್ ಬಗ್ಗೆ ತಿಳಿದವರು ಇದರ ಕುರಿತು ತಪ್ಪಾಗಿ ಮಾತನಾಡಲು ಅಸಾಧ್ಯ. ಕರ್ನಾಟಕದಲ್ಲಿ ಭದ್ರ ಬುನಾದಿ ಆ ಸಂಸ್ಥೆಗೆ ಇದೆ. ಅಮೂಲ್ ಸ್ಪರ್ಧೆ ಎದುರಿಸಲು ನಂದಿನಿ ಉತ್ಪನ್ನಗಳು ಅತ್ಯಂತ ಸಮರ್ಥವಾಗಿವೆ. ಬಳ್ಳಾರಿ, ಹಾವೇರಿ, ಮಂಡ್ಯದಲ್ಲಿ ಮೆಗಾ ಡೈರಿ ಆಗಿದೆ. ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ಕೆಎಂಎಫ್ ಅಭದ್ರತೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.