ಅಭಿಮನ್ಯು ಸೇರಿ ದಸರಾ ಆನೆಗಳು ಮೈಸೂರಿನತ್ತ ಹೆಜ್ಜೆ
ಸುದ್ದಿಮೂಲ ವಾರ್ತೆ
ಮೈಸೂರು, ಸೆ.1: ನಾಡ ಪರಂಪರೆಯನ್ನು ಸಾರುವ ವಿಶ್ವವಿಖ್ಯಾತ ದಸರಾ ಹಬ್ಬಕ್ಕೆ ಗಜ ಪಯಣದ ಮೂಲಕ ಚಾಲನೆ ನೀಡಲಾಗಿದೆ. ತನ್ನ ಗಜಗಾಂಭೀರ್ಯಕ್ಕೆ ತಕ್ಕಂತೆ ವಿಜಯದಶಮಿಯಂದು ಚಿನ್ನದಂಬಾರಿ ಹೊತ್ತು ಜನ-ಮನವನ್ನು ಸೂರೆಗೊಳ್ಳುವ ಅಭಿಮನ್ಯು ನಾಯಕತ್ವದ ಗಜಪಡೆ ಶುಭ ಶುಕ್ರವಾರ ಮೈಸೂರಿನತ್ತ ಸಾಗಿದವು.
ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಅಲಂಕೃತ ಗಜಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ , ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಜೊತೆಗೆ ಇದೇ ವೇಳೆ ಸಾಂಸ್ಕತಿಕ ಕಲಾತಂಡಗಳು, ವೀರಗಾಸೆ, ಮಂಗಳವಾದ್ಯ, ತಮಟೆ, ಚಂಡೆಯ ನಾದದ ಪೂರ್ಣಕುಂಭದೊಡನೆ ಸ್ವಾಗತಿಸಲಾಯಿತು. ಬೆಳಗ್ಗೆ 9.45 ರಿಂದ 10-15 ರ ನಡುವೆ ಸಲುವ ತುಲಾ ಶುಭ ಲಗ್ನದಲ್ಲಿ ಸಂಪ್ರದಾಯದಂತೆ ಮೈಸೂರು ಅರಮನೆ ಪುರೋಹಿತರಾದ ಪ್ರಹಲ್ಲಾದರಾವ್ ತಂಡ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನೆರೆವೇರಿಸಿದರು.
ನಂತರ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ವರಲಕ್ಷ್ಮೀ, ವಿಜಯ, ಧನಂಜಯ, ಗೋಪಿ, ಭೀಮ, ಮಹೇಂದ್ರ, ಕಂಜನ್ ಹಾಗೂ ಹಿರಿಯ ಆನೆ ಅರ್ಜುನ ತಂಡವು ಕಬ್ಬು, ಬೆಲ್ಲ ಸೇವಿಸಿ ವಿಜೃಂಭಣೆಯಿಂದ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು.
ಮಾವುತರಿಗೆ ಸನ್ಮಾನ, ಗೌರವ
ದಸರಾ ಮೆರವಣಿಗೆಯಲ್ಲಿ ಯಾವುದೇ ಅಡ್ಡಿ, ಆತಂಕವಿಲ್ಲದೆ ಆನೆಗಳನ್ನು ಕರೆದುಕೊಂಡು ಹೋಗುವಲ್ಲಿ ಮಹತ್ವದ ಪಾತ್ರ ವಹಿಸುವ ಮಾವುತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ನಾಡಹಬ್ಬ ದಸರಾ ಅಂಗವಾಗಿ ಆನೆಗಳನ್ನು ಮೈಸೂರಿಗೆ ಕರೆತರುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ದಸರಾ ಉತ್ಸವವು ಹಾಡುವುದಕ್ಕೆ, ಕುಣಿಯುದಕ್ಕೆ ಸೀಮಿತವಲ್ಲ. ದೇಶದ ಜನರ ಬದುಕು, ಆಡಳಿತ, ವೈವಿಧ್ಯ ಹಾಗೂ ಸಮಾನತೆ ನಿರೂಪಣೆ ಮಾಡುವ ಮಹಾನ್ ಪ್ರದರ್ಶನ. ಈ ಕಾರಣಕ್ಕೆ ದಸರಾ ಉತ್ಸವ ವಿಶ್ವಖ್ಯಾತಿ ಪಡೆದಿದೆ ಎಂದು ಹೇಳಿದರು.
ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಜನರು ನಾಡದೇವತೆ ಚಾಮುಂಡೇಶ್ವರಿಯನ್ನು ಅರಸರ ಬದಲಾಗಿ ಆನೆಯ ಮೇಲೆ ಅಂಲಂಕರಿಸಿ ಚಿನ್ನದ ಅಂಬಾರಿಯಲ್ಲಿ ಪ್ರದಕ್ಷಿಣೆ ಮಾಡುವ ಮುಖೇನ ನಾವೆಲ್ಲರೂ ಭಾರತೀಯರು, ಕನ್ನಡಿಗರು ಎಂಬುದನ್ನು ಎಲ್ಲಾ ರಾಜ್ಯ ದೇಶ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಸಾರಬೇಕಿದೆ ಎಂದು ಕರೆ ನೀಡಿದರು. .
ಬಹುಮುಖ ಪ್ರತಿಭೆಯ ತವರೂರಾದ ಮೈಸೂರಲ್ಲಿ ಎಲ್ಲರೂ ಸೇರಿ ಇಲ್ಲಿನ ಸಾಂಸ್ಕೃತಿಕ ಬದುಕನ್ನು, ಜನ ಜೀವನವನ್ನು, ಚಾರಿತ್ರಿಕ ಹಿನ್ನೆಲೆಯ ಜೊತೆಗೆ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ, ಶ್ರೇಷ್ಠತೆ, ಪ್ರೌಢಿಮೆಯನ್ನು ದೇಶದ ಉದ್ದಗಲಕ್ಕೆ ಮತ್ತು ಪ್ರಪಂಚದಾದ್ಯಂತ ಪ್ರದರ್ಶನ ಮಾಡಲು ಇರುವಂಥ ದೊಡ್ಡ ಅವಕಾಶ ನಾಡಹಬ್ಬ ದಸರಾವಾಗಿದೆ ಎಂದು ತಿಳಿಸಿದರು.
ಆನೆಗಳ ಕುರಿತ ಪಟ್ಟಿ ಬಿಡುಗಡೆ
ಇದೇ ಸಂದರ್ಭದಲ್ಲಿ ದಸರಾ- 2023 ಆನೆಗಳ ಪಟ್ಟಿ ಮತ್ತು ಕಿರು ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರು, ಕಾಡಿನ ಉಳಿವು, ಮನುಷ್ಯನ ಉಳಿವು. ಕಾಡು ನಾಶವಾದರೆ ಮನುಷ್ಯ ನಾಶವಾಗುತ್ತಾನೆ. ವನ್ಯಸಂಪತ್ತು ದೇಶದ ಸಂಪತ್ತು. ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಶೇ.33 ರಷ್ಟು ಅರಣ್ಯ ಪ್ರದೇಶವಿರಬೇಕಿತ್ತು. ಆದರೆ ನಮ್ಮಲ್ಲಿ ಶೇ.21 ರಷ್ಟು ಮಾತ್ರ ಅರಣ್ಯವಿದೆ. ಪ್ರಕೃತಿಯ ಸಂಪತ್ತಿನ ಸಮತೋಲನ ಕಾಪಾಡಲು ಕಾಡಿನ ರಕ್ಷಣೆ, ಅಭಿವೃದ್ಧಿ, ವಿಸ್ತರಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ ಎಂದರು.
ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೈಸೂರು ನಗರ ಪಾಲಿಕೆ ಮೇಯರ್ ಶಿವಕುಮಾರ್, ದೊಡ್ಡಹೆಜ್ಜೂರು ಗ್ರಾ.ಪಂ. ಅಧ್ಯಕ್ಷೆ ಅಂಬಿಕ ಲೋಕೇಶ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್ ಮತ್ತಿರರು ಇದ್ದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.