ಅರಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ಸುದ್ದಿಮೂಲ ವಾರ್ತೆ
ಮೈಸೂರು, ಅ.10:ಪ್ರತಿ ವರ್ಷ ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆಯ ಮುಖ್ಯ ವೇದಿಕೆಯಲ್ಲಿ ದಸರಾ ಉದ್ಘಾಟನಾ ಸಮಾರಂಭದಂದು 2023-24 ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಹಿರಿಯ ಸಂಗೀತ ವಿದುಷಿ ಡಾ. ಪದ್ಮಾಮೂರ್ತಿ ಅವರಿಗೆ ರಾಜ್ಯ ಸರ್ಕಾರ ಪ್ರದಾನ ಮಾಡಲಿದೆ.
2023-24ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಗಾಗಿ ಪ್ರಸಿದ್ಧ ಕ್ಲಾರಿಯೋನೆಟ್ ವಾದಕರಾದ ಡಾ. ಪಂಡಿತ್ ನರಸಿಂಹಲು ವಡವಾಟಿ ರವರ ಅಧ್ಯಕ್ಷತೆಯ ಸಮಿತಿಯು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ. ಪದ್ಮಾ ಮೂರ್ತಿ ಅವರನ್ನು ಆಯ್ಕೆ ಮಾಡಿದೆ. ಸಮಿತಿಯ ಆಯ್ಕೆಯಂತೆ ಡಾ. ಪದ್ಮಾ ಮೂರ್ತಿ, ಬೆಂಗಳೂರು ಅವರನ್ನು 2023-24ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಗಾಗಿ ಸರ್ಕಾರವು ಆಯ್ಕೆ ಮಾಡಿದೆ.
ಅ.15 ರಂದು ಮೈಸೂರು ಅರಮನೆಯ ಮುಖ್ಯ ವೇದಿಕೆಯಲ್ಲಿ ನಾಡಹಬ್ಬ ದಸರಾದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸಂಗೀತ ವಿದುಶಿ ಡಾ. ಪದ್ಮಾ ಮೂರ್ತಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ.ಗಳ ನಗದು, ಸರಸ್ವತಿ ವಿಗ್ರಹದ ಸ್ಮರಣಿಕೆ, ಪ್ರಶಸ್ತಿ ಫಲಕ, ಶಾಲು, ಹಾರ, ಫಲತಾಂಬುಲಗಳನ್ನು ಒಳಗೊಂಡಿರುತ್ತದೆ.
ಪರಿಚಯ ಮತ್ತು ಸಾಧನೆ
ಪದ್ಮಾ ಮೂರ್ತಿ ಅವರು ಜನಿಸಿದ್ದು ಫೆ. 24,.1932 ರಂದು. ಈಗ ಅವರಿಗೆ 91 ವರ್ಷ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಡಾ. ಪದ್ಮಾ ಮೂರ್ತಿ ಅವರು ಮೈಸೂರು ವಾಸುದೇವಾಚಾರ್ಯ, ಟಿ. ಚೌಡಯ್ಯ, ಟಿ. ಪುಟ್ಟಸ್ವಾಮಯ್ಯನವರ ಬಳಿ ಸಂಗೀತಾಭ್ಯಾಸವನ್ನು ಎಚ್. ಎಸ್. ಕೃಷ್ಣಮೂರ್ತಿ, ಆರ್ . ಎಸ್. ಕೇಶವಮೂರ್ತಿಯವರ ಬಳಿ ವೀಣಾ ವಾದನವನ್ನು ಕಲಿತಿರುತ್ತಾರೆ. ಇವರು ಬಿ. ಎಸ್. ಸಿ., ಎಂ. ಎ., ಪಿ. ಹೆಚ್. ಡಿ., ಡಿ. ಲಿಟ್. ಪದವೀಧರರು. ಸಂಗೀತದಲ್ಲಿ ವಿದ್ವತ್, ಸೈಕಾಲಜಿ ಆಫ್ ಮ್ಯೂಸಿಕ್ ಎಂಬ ವಿಷಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.
ಅಕಾಶವಾಣಿಯ ಬಿ-ಹೈ ಕಲಾವಿದರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರಾಗಿ ಹಾಗೂ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ತಜ್ಞರ ಸಮಿತಿ ಸದಸ್ಯರೂ ಆಗಿದ್ದರು. ರಾಜ್ಯ-ಹೊರರಾಜ್ಯ, ವಿದೇಶಗಳಲ್ಲಿ ಕಚೇರಿ ಪ್ರಾತ್ಯಕ್ಷಿಕೆ ನೀಡಿರುತ್ತಾರೆ. ಇವರು ಬರೆದಿರುವ ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ 2 ಸಂಪುಟಗಳಲ್ಲೂ, ವಾಗ್ಗೇಯಕಾರರುಗಳ ಬಗ್ಗೆಯೂ ಮತ್ತು ಇತರ ಹಲವು ಲೇಖನಗಳು ಪ್ರಕಟಣೆಗೊಂಡಿವೆ.
ಇವರ ಕಾರ್ಯಕ್ರಮಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ. ಕರ್ನಾಟಕ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಗೀತ ನ್ಯತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶ್ತಸ್ತಿ, ಮದರಾಸಿನ ಪಾರ್ಥಸಾರಥಿ ಸಂಗೀತ ಸಭಾದಿಂದ ವಿದ್ಯಾರತ್ನ, ಬೆಂಗಳೂರು ಗಾಯನ ಸಮಾಜದ ವರ್ಷದ ಕಲಾವಿದೆ ಮುಂತಾದ ಅನೇಕ ಸನ್ಮಾನಗಳು ಇವರಿಗೆ ಸಂದಿವೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.