ಆರೋಗ್ಯಪೂರ್ಣ ಜೀವನಕ್ಕೆ ಮರ-ಗಿಡ ಆಧಾರ: ಈಶ್ವರ ಖಂಡ್ರೆ
ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.3: ಆರೋಗ್ಯಪೂರ್ಣ ಬದುಕಿಗೆ ಮರಗಿಡಗಳೇ ಆಧಾರವಾಗಿದ್ದು, ನೆರಳು, ಫಲ, ಪ್ರಾಣವಾಯು ನೀಡುವ ವೃಕ್ಷವನ್ನು ಪೋಷಿಸುವ ಹೊಣೆ ಎಲ್ಲರ ಮೇಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಬಳಿ ಇರುವ ಕಾಂಗ್ರೆಸ್ ಕಚೇರಿ ಮತ್ತು ಸಮೀಪದಲ್ಲೇ ಇರುವ ಗಾಂಧೀ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಸಸಿ ನೆಟ್ಟು ನೀರೆರೆದು ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದಾದ್ಯಂತ ಈ ವರ್ಷ 5 ಕೋಟಿ ಗಿಡ ನೆಡುವ ಸಂಕಲ್ಪ ಮಾಡಲಾಗಿದ್ದು, ಇದಕ್ಕೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಕೈಜೋಡಿಸಿದ್ದು, ಜು.1ರಿಂದ ಜು.7ರೊಳಗೆ ವೃಕ್ಷ ಕೋಟಿ ಅಭಿಯಾನ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಸಿ ನೆಡುವುದಷ್ಟೇ ಅಲ್ಲದೆ, ನೆಟ್ಟ ಸಸಿಗಳ ಪೈಕಿ ಎಷ್ಟು ಉಳಿಯುತ್ತವೆ, ಬೆಳೆಯುತ್ತವೆ ಎಂಬ ಬಗ್ಗೆ ನಿಖರ ಮಾಹಿತಿ ಪಡೆಯಲು ಜಿಯೋಟ್ಯಾಗ್ ಮಾಡಲಾಗುತ್ತಿದೆ. ಸರ್ಕಾರ ರಾಜ್ಯದ ಹಸಿರು ವ್ಯಾಪ್ತಿಯನ್ನು ಶೇ.33ಕ್ಕೆ ಹೆಚ್ಚಿಸಲು ಕಟಿಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಏನೆಲ್ಲಾ ಪ್ರಯತ್ನ ಮಾಡಬಹುದೋ ಆ ಎಲ್ಲ ಅವಕಾಶಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಿದೆ ಎಂದರು.
ನಾಡಿನ ಸಮಸ್ತ ಜನತೆಗೂ ವೃಕ್ಷದ ಮಹತ್ವ ಮನವರಿಕೆಯಾಗಿ, ಪ್ರೀತಿಯಿಂದ ಸಸಿ ನೆಟ್ಟು ಬೆಳೆಸಲು ಪ್ರತಿಯೊಬ್ಬರೂ ಮುಂದಾದರೆ ಮುಂದಿನ 5 ವರ್ಷಗಳಲ್ಲಿ ಯಶಸ್ವಿಯಾಗಿ 25 ಕೋಟಿ ಗಿಡ ನೆಟ್ಟು ರಾಜ್ಯದ ಹಸಿರು ವ್ಯಾಪ್ತಿಯಲ್ಲಿ ಕ್ರಾಂತಿಯನ್ನೇ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ನನ್ನ ಗಿಡ ನನ್ನ ಹೆಮ್ಮೆ ಎಂಬ ಅಭಿಯಾನ ಈಗಾಗಲೇ ಕಲ್ಯಾಣ ಕರ್ನಾಟಕದ ಬೀದರ್ ನಿಂದ ಆರಂಭವಾಗಿದ್ದು, ರಾಜ್ಯದ ಎಲ್ಲೆಡೆ ಈ ಕೂಗು ಮೊಳಗಬೇಕು. ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಮನೆಯ ಮುಂದೆ ಒಂದೊದು ಗಿಡ ನೆಟ್ಟು ಅದರ ಪಾಲನೆ, ಪೋಷಣೆಯ ಹೊಣೆ ಹೊರಬೇಕು ಎಂದು ಕರೆ ನೀಡಿದರು.
ಗಿಡಮರದಿಂದ ಆರೋಗ್ಯ:
ಇಂದು ಮಾಲಿನ್ಯದಿಂದ ವಾತಾವರಣ ಕಲುಷಿತವಾಗುತ್ತಿದೆ. ತಾಪಮಾನ ಏರುತ್ತಿದೆ. ಇದಕ್ಕೆ ಹೆಚ್ಚು ಹೆಚ್ಚು ಗಿಡ ಮರ ಬೆಳೆಸುವುದು ಪರಿಹಾರ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಎಲ್ಲರೂ ಕಡ್ಡಾಯವಾಗಿ ಗಿಡಗಳನ್ನು ನೆಟ್ಟು ಅದನ್ನು ಮರವಾಗಿ ಬೆಳೆಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಪಕ್ಷದ ಮುಖಂಡರಾದ ಜಿ. ಜನಾರ್ಧನ್,ಎ.ಆನಂದ್ ಜಯಸಿಂಹ, ಸುಧಾಕರ್, ಈ.ಶೇಖರ್,ರಾಮಕೃಷ್ಣ, ಪ್ರಕಾಶ್,ರವಿಶೇಖರ್, ಚಿನ್ನಿಪ್ರಕಾಶ್, ಓಬಳೇಶ್, ಪುಟ್ಟರಾಜು,ಹಾಗೂ ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಿದ್ದರು
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.